ಯಕ್ಷಗಾನ ಸಪ್ತಾಹದಲ್ಲಿ ಪ್ರಸಂಗಕರ್ತಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಮಾರ್ಚ್ 24 , 2015
|
ಮಾರ್ಚ್ 23, 2015
|
ಯಕ್ಷಗಾನ ಸಪ್ತಾಹದಲ್ಲಿ ಪ್ರಸಂಗಕರ್ತಗೆ ಸನ್ಮಾನ
ಸಿದ್ದಾಪುರ :
ಸತಿ ಸೀಮಂತಿನಿ ಯಕ್ಷಗಾನ ಪ್ರಸಂಗವು ಕಾಳಿಂಗ ನಾವುಡರ ಅದ್ಭುತ ಭಾಗವತಿಕೆಯಿಂದಾಗಿ ಅಭೂತಪೂರ್ವ ಕೀರ್ತಿ ತಂದುಕೊಟ್ಟಿದೆ ಎಂದು ಸತಿ ಸೀಮಂತಿನಿ ಯಕ್ಷಗಾನದ ಪ್ರಸಂಗದ ಕವಿ ಕಂದಾವರ ರಘುರಾಮ ಶೆಟ್ಟಿ ಹೇಳಿದರು.
ಅವರು ಇತ್ತೀಚೆಗೆ ತಾಲೂಕಿನ ಕವಲಕೊಪ್ಪ ಸಿದ್ದಿವಿನಾಯಕ ದೇವಾಲಯದಲ್ಲಿ ಇಟಗಿಯ ಕಲಾಭಾಸ್ಕರ ಸಂಸ್ಥೆ ಏರ್ಪಡಿಸಿದ್ದ ಯಕ್ಷಗಾನ ಸಪ್ತಾಹದ ಪ್ರಸಂಗದರ್ಶನ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಕ್ಷಗಾನದಲ್ಲಿ ಸಾಹಿತ್ಯ ಕೃಷಿಯು ಕಷ್ಟಕರವಾಗಿದ್ದು, ಅದನ್ನು ಪ್ರದರ್ಶಿಸುವಾಗ ಉತ್ತಮ ಭಾಗವತರನ್ನೊಳಗೊಂಡ ಹಿಮ್ಮೇಳ ಹಾಗೂ ಸಮರ್ಥ ಕಲಾವಿದರನ್ನು ಹೊಂದಿರುವ ಮುಮ್ಮೇಳ ಇದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ತಮ್ಮ ಮೊದಲ ಯಕ್ಷಗಾನ ಕೃತಿ ಸತಿ ಸೀಮಂತಿನಿಯಾಗಿದ್ದು ಸಮರ್ಥ ಹಿಮ್ಮೇಳ ಹಾಗೂ ಮುಮ್ಮೇಳದಿಂದಾಗಿ ಯಶಸ್ವಿಯಾಯಿತು. ಇದುವರೆಗೂ 33 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು, ರಂಗದಲ್ಲಿ ಅವು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ ಎಂದು ಹೇಳಿದರು.
ಕೃತಿಯ ಕುರಿತು ಮಾತನಾಡಿದ ತಾಳಮದ್ದಳೆ ಅರ್ಥಧಾರಿ ವಿನಾಯಕ ಹೆಗಡೆ ಕವಲಕೊಪ್ಪ, ಯಕ್ಷಗಾನಕ್ಕೆ ಅವಶ್ಯವಾಗಿರುವ ಎಲ್ಲಾ ಗುಣಗಳನ್ನು ಹೊಂದಿರುವ ಸತಿ ಸೀಮಂತಿನಿ ಯಕ್ಷಗಾನದ ಕಾವ್ಯವು ಸರಳವಾಗಿದ್ದು,ಪ್ರದರ್ಶನಕ್ಕೆ ಸೂಕ್ತವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ರವೀಂದ್ರ ಭಟ್ಟ ಬಳಗುಳಿ ಹಾಗೂ ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಡಿ.ಭಟ್ಟ ಅಗ್ಗೇರಿ ಮಾತನಾಡಿದರು. ವಿನಾಯಕ ದೇವಾಲಯದ ಮೊಕ್ತೇಸರ ಸುಬ್ರಾಯ ಹೆಗಡೆ ಚಳ್ಳೆಹದ್ದ ಅಧ್ಯಕ್ಷತೆವಹಿಸಿದ್ದರು. ಕಲಾ ಭಾಸ್ಕರದ ಮಹಬಲೇಶ್ವರ ಭಟ್ಟ ಇಟಗಿ ಸ್ವಾಗತಿಸಿದರು. ಪುರುಷೋತ್ತಮ ಭಟ್ಟ ಮತ್ತು ವಿನಾಯಕ ಹೆಗಡೆ ಗೋಳಗೋಡ ನಿರೂಪಿಸಿದರು. ನಂತರ ಸತಿ ಸೀಮಂತಿನಿ ಯಕ್ಷಗಾನವನ್ನು ಪ್ರದರ್ಶಿಸಲಾಯಿತು.
ಕೃಪೆ :
http://vijaykarnataka.com
|
|
|